Tuesday, October 30, 2007

ಯಾರು ಸಾಧಕರು..?

ಮೊನ್ನೆ ಮೊನ್ನೆ ಸುವರ್ಣ ರಾಜ್ಯೋತ್ಸವ ಆಚರಿಸಿ ಖುಷಿಪಟ್ಟಾಯಿತ್ತು. ಈಗ ಮತ್ತೆ ಬಂದಿದೆ 'ರಾಜ್ಯೋತ್ಸವ'..ಕನ್ನಡ ನಾಡಿನ ಹಬ್ಬ..ಕನ್ನಡಿಗರಾದ ನಮಗೆಲ್ಲಾ ಮನದೊಳಗೆ ಪುಳಕ.. ಈ ಬಾರಿಯೂ ರಾಜ್ಯೋತ್ಸವ ಪ್ರಶಸ್ತಿಗಳಿಗೇನು ಬರವಿಲ್ಲ. ಅರ್ಧಶತಕ್ಕಿಂತಲೂ ಹೆಚ್ಚು ಮಂದಿ ಸಾಧಕರು ರಾಜ್ಯೋತ್ಸವ ಪ್ರಶಸ್ತಿ ಪಡೆಯಲಿದ್ದಾರೆ. ಪ್ರತಿ ಬಾರಿಯೂ ಅಷ್ಟೇ ನಮ್ಮ ರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿ ದೊಡ್ಡದೇ ಇರುತ್ತದೆ. ಮಾತ್ರವಲ್ಲ ನಮ್ಮ ಕರ್ನಾಟಕ ಈ ವಿಷಯದಲ್ಲಿ ಎಂದಿಗೂ ಜಿಪುಣತನ ತೋರಿಸಿಲ್ಲ. ಸಿಕ್ಕಸಿಕ್ಕವರಿಗೆಲ್ಲಾ ಪ್ರಶಸ್ತಿ ನೀಡಿ ಶಹಭಾಸ್ ಗಿರಿ ಗಿಟ್ಟಿಸಿದೆ. ಹಾಗಂತ ಇವರೆಲ್ಲಾ ಪ್ರಶಸ್ತಿಗೆ ಅರ್ಹರಲ್ಲವೆಂದಲ್ಲ. ಆದರೆ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಸರ್ಕಾರ ಧುತ್ತನೆ ಎಚ್ಚೆತ್ತುಕೊಂಡು ಆತುರಾತುರದಿಂದ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಿ ಬಿಡುತ್ತದೆ. ಆಗಲೇ ಗೊತ್ತು ಜನರಿಗೆ..ಓಹ್ ಇಷ್ಟು ಜನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆಂದು! ಆ ಸಾಧಕರ ಸಾಧನೆಯನ್ನು ಜನ ಹುಡುಕಾಡುವುದೂ ಆವಾಗಲೇ.. ಎಷ್ಟೋ ಬಾರಿ ಸರ್ಕಾರ ಮಹತ್ತರ ಸಾಧನೆ ಮಾಡಿದವರನ್ನೇ ಕಡೆಗಣಿಸಿದೆ, ಸರ್ಕಾರದ ಕ್ರಮ ಸರಿಯಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಮಾತ್ರವಲ್ಲ ಪ್ರಶಸ್ತಿಯ ಆಸೆಯಿಂದ ತಮ್ಮ ಹೆಸರು ನೋಂದಾಯಿಸಿ ಕೊನೆಗೆ ಪ್ರಶಸ್ತಿ ಸಿಗದೆ ಹತಾಶರಾಗಿ ಬೀದಿಗಿಳಿದ ಸನ್ನಿವೇಶಗಳು ಅದೆಷ್ಟೋ ಇವೆ.

ಹೀಗಿರುವಾಗ ಸರ್ಕಾರ ಸಾಧಕರನ್ನು ಗುರುತಿಸುವ ಕೆಲಸವನ್ನು ಜನಸಾಮಾನ್ಯರಿಗೆ ನೀಡಬೇಕು. ಮಹತ್ತರ ಸಾಧನೆ ಮಾಡಿದ ಎಂಥಹ ಮಹಾ ಸಾಧಕನಾದರೂ ಹಳ್ಳಿಯ ಸಾಮಾನ್ಯನಿಗೂ ಗೊತ್ತಿರುತ್ತದೆ. ಸರ್ಕಾರ ಈ ಕೆಲಸವನ್ನು ಜನರ ಕೈಗೆ ನೀಡಲಿ. ನಿಜವಾದ ಸಾಧಕನನ್ನು ಜನರು 'ಆಯ್ಕೆ' ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸರ್ಕಾರ ಈವರೆಗೆ ಆ ಬಗ್ಗೆ ಕಿಂಚಿತ್ತು ಯೋಚನೆಯೂ ಮಾಡಿಲ್ಲ. ವರ್ಷಕ್ಕೊಮ್ಮೆ ಪ್ರಶಸ್ತಿ ನೀಡಿ ಕೈತೊಳೆದುಕೊಂಡು ಸುಮ್ಮಿನಿರುತ್ತದೆ. ಪ್ರಶಸ್ತಿ ಪಡೆದವರು ಸಾಧಕರೋ ಅಥವ ಬಾಧಕರೋ ಪ್ರಶಸ್ತಿ ಕೊಟ್ಟರೆ ಸಾಕು..ಇದು ಸರ್ಕಾರದ ರೀತಿ.

ಪ್ರಶಸ್ತಿ-ಪುರಸ್ಕಾರ ಯಾವುದನ್ನೂ ಬಯಸದೆ ಸದ್ದಿಲ್ಲದ ಸಾಧಕರಾಗಿ ಮೆರೆದ ಅದೆಷ್ಟೋ ಮಹಾನುಭಾವರು ನಮ್ಮ ಸಮಾಜದಲ್ಲಿದ್ದಾರೆ. ಅವರೆಂದೂ ಪ್ರಚಾರ ಬಯಸುವುದಿಲ್ಲ. ಪ್ರಶಸ್ತಿಗಾಗಿ ತನ್ನ ಜೀವಮಾನದ 'ಸಾಧನೆ'ಗಳ ಪಟ್ಟಿಯನ್ನು ಸರ್ಕಾರದ ಮುಂದಿಟ್ಟು ಪ್ರಶಸ್ತಿ ನೀಡಿ ಎಂದು ಗೋಗರೆಯುವುದಿಲ್ಲ. ಸರ್ಕಾರ ಅವರಿಗೆ ಯಾವುದೇ ಮನ್ನಣೆ ನೀಡದಿದ್ದರೂ ಅವರೆಂದೂ ಬೀದಿಗಿಳಿದು ಪ್ರತಿಭಟನೆ ಮಾಡಿಲ್ಲ. ಆದರೆ ನಮ್ಮ ಸರ್ಕಾರ ಅಂಥವರನ್ನು ಹುಡುಕುವ ಪ್ರಯತ್ನ ಮಾಡಲ್ಲ. ಯಾಕೆಂದರೆ ಕುರ್ಚಿಗಾಗಿ ಕಿತ್ತಾಡುವ, ಅಧಿಕಾರ ಸಿಗಲೆಂದು ದೇಶದ ದೇವಸ್ಥಾನಗಳೆದುರು ಅಮಾಯಕರಂತೆ ಕೈಮುಗಿದು ದಿನವಿಡೀ ಪ್ರಾರ್ಥಿಸುವ, ಓಟಿಗಾಗಿ ಕೋಟಿಗಟ್ಟಲೆ 'ನೋಟು' ಖರ್ಚುಮಾಡಿ ವರ್ಷವಿಡೀ 'ಜಾಗೃತಿ' ಯಾತ್ರೆ ಕೈಗೊಳ್ಳುವ ನಮ್ಮನ್ನಾಳುವ 'ನಾಯಕರಿಗೆ' ಸಮಾಜದತ್ತ ಕಣ್ಣುಹಾಯಿಸಲು ಸಮಯವೆಲ್ಲಿದೆ ಹೇಳಿ?

ದಿನನಿತ್ಯ ಮಾಧ್ಯಮಗಳು ಈ ರೀತಿಯ ಲೇಖನಗಳನ್ನು ಪುಟಗಟ್ಟಲೇ ಬರೆಯುತ್ತಲೇ ಇರುತ್ತವೆ. 'ರಾಜಕೀಯ' ಕೊಳೆತು ನಾರಿದರೂ, ನಮ್ಮ ನಾಯಕ ಮಹಾಶಯರು ಬದಲಾಗಿಲ್ಲ ಅದು ಬೇರೆ ವಿಷಯ. ಆದ್ರೂ ಒಬ್ಬೇ ಒಬ್ಬ ನಾಯಕನಾದ್ರೂ ಸಮಾಜದತ್ತ ಕಣ್ಣೆತ್ತಿ ನೋಡಬಹುದೆಂಬ ಭರವಸೆಯಿಂದ ನಾವು ಬರೆಯುತ್ತಿದ್ದೇವೆ.

ಇರಲಿ..
ಕನ್ನಡಿಗರಾದ ಎಲ್ಲರಿಗೂ 'ನಾಡ ಹಬ್ಬ'ದ ಶುಭಾಶಯಗಳು
ಇದು ಕೇವಲ ಹಬ್ಬವಲ್ಲ..ನಮ್ಮನ್ನು ನಾವು ಅತ್ಮಾವಲೋಕನ ಮಾಡಿಕೊಳ್ಳುವ ಸಮಯ. ಕನ್ನಡಿಗರಾದ ನಾವು ಕನ್ನಡಕ್ಕೇನು ನೀಡಿದ್ದೇವೆ? ತಮ್ಮಿಂದ ಏನು ಕೊಡಲು ಸಾಧ್ಯ? ಕನ್ನಡ ಭಾಷೆ ಕೇವಲ ಭಾಷೆಯಲ್ಲ..ಕನ್ನಡ ನಮ್ಮಮ್ಮ..ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವಾಗಬೇಕು..ಕನ್ನಡ ದೀಪ ಹಚ್ಚಬೇಕು..ಅದು ನಮ್ಮ ಮನೆ-ಮನಗಳನ್ನು ಬೆಳಗಬೇಕು.
'ಎಲ್ಲಾದರೂ ಇರು, ಎಂತಾದರೂ ಇರು
ಎಂದೆಂದಿಗೂ ನೀ ಕನ್ನಡವಾಗಿರು.."
*** *** *** ***

Wednesday, October 10, 2007

'ಗಾಂಧಿ' ನಡುವೆ ಮರೆಯಾದ 'ಶಾಸ್ತ್ರೀಜಿ'


ಅದೇ ಮೊನ್ನೆ ಮೊನ್ನೆ ವಿಶ್ವಕಪ್ ಟ್ವೆಂಟಿ-20 ಸಂಭ್ರಮವನ್ನು ಪುಟಗಟ್ಟಲೆ ಗೀಚಿ, 'ಶಕ್ತಿ-ಭಕ್ತಿ'ಎಂದೆಲ್ಲಾ ಪೂಜಿಸಿದ ನಮ್ಮ ಈ ವಾರದ ವಾರಪತ್ರಿಕೆಗಳು 'ಅದೇ ರಾಗ ಅದೇ ಹಾಡು' ಎಂಬಂತೆ ಎಂದಿನಂತೆ ಮೂಡಿಬಂದಿವೆ. ತನ್ನ ರುಚಿ ರುಚಿ ಚಟ್ನಿ, ಧಾರವಾಹಿಗಳು, ಕೆಲವೊಂದಿಷ್ಟು ರಾಜಕಾರಣ..ಹೀಗೆ ನಿತ್ಯ ರಾಗಗಳನ್ನು ಪುನರಾವರ್ತನೆ ಮಾಡಿವೆ.
ಹ್ಞಾಂ! ಹೇಳೋಕೆ ಮರೆತೆ.. ಮೊನ್ನೆ ಅಕ್ಟೋಬರ್ 2 ರಂದು ಏನು ವಿಶೇಷವಿತ್ತು? ಗಾಂಧಿ ಜಯಂತಿ. ಈಗ ತಾನೇ ಅ ಆ ಇ ಈ ಕಲಿಯೋಕೆ ಶುರು ಮಾಡಿದ ಪುಟ್ಟ ಮಗುವಿನಿಂದ ಹಿಡಿದು, ಆ ಪುಟ್ಟ ಮಗುವಿಗೆ ಕಲಿಸುವ 'ಟೀಚರ್' ತನಕ ಎಲ್ಲರಿಗೂ ಅಕ್ಟೋಬರ್ 2 ನಮ್ಮ ರಾಷ್ಟ್ರಪಿತ ಗಾಂಧಿತಾತನ ಹುಟ್ಟುಹಬ್ಬವೆಂದು ಚೆನ್ನಾಗಿ ಗೊತ್ತು.. ಗಾಂಧಿ ಜಯಂತಿ ನಿಮಿತ್ತ ತಾತನ ನೆನಪಲ್ಲಿ ಲಡ್ಡು, ಹೋಳಿಗೆ ಹಂಚಿ ತಿಂದು ಖುಷಿ ಪಟ್ಟಾಯಿತು.. ಅದ್ಸರಿ... ಗಾಂಧೀಜಿಯನ್ನು ನಾವು ಪೂಜಿಸಲೇಬೇಕು.
ಆದರೆ...ಇದೇ ಗಾಂಧಿತಾತನ ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಭಾರತದ ಎರಡನೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಮ್ಮ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ ಅಕ್ಟೋಬರ್ 2ರಂದು ಎಂದು ಯಾರಿಗಾದರೂ ನೆನಪಿದೆಯೇ? ಮಾಧ್ಯಮಗಳು ಆ ಕುರಿತಾದ ಕನಿಷ್ಟ ಕಾಳಜಿಯನ್ನೂ ತೋರಿಸಿಲ್ಲ. ಗಾಂಧಿ ಜಯಂತಿ ಪ್ರಯುಕ್ತ 'ವಿಕ್ರಾಂತ' ವಾರ ಪತ್ರಿಕೆಯಲ್ಲಿ ಪ್ರಸಕ್ತ ನಮ್ಮ ರಾಜಕೀಯದಲ್ಲಿ ಕೊಳೆತು ನಾರುತ್ತಿರುವ ಪುರಾಣ ಪ್ರಸಿದ್ಧ ರಾಮಸೇತು ಪ್ರಕರಣದೊಂದಿಗೆ ಗಾಂಧಿಯನ್ನು ಹೋಲಿಸಿ 'ಗಾಂಧೀಜಿಯ ರಾಮ v/s ರಾಜಕಾರಣದ ರಾಮ', ಇನ್ನೊಂದೆಡೆ ಗಾಂಧಿ ಮತ್ತು ರಾಜಕಾರಣ ಎಂದು ಪುಟಗಟ್ಟಲೆ ಬರೆದಿದ್ದರು. 'ಸುಧಾ'ದಲ್ಲಿ ಎಟರ್ನಲ್ ಗಾಂಧಿ... ಹೀಗೆ ಹಲವಾರು ಪತ್ರಿಕೆಗಳಲ್ಲಿ ಗಾಂಧಿ ನಡೆದ ಹಾದಿ-ಚಳುವಳಿ ಬಗ್ಗೆ ಬರದಿದ್ದನ್ನೇ ಬರೆದಿದ್ದರು. ಪಾಪ! ಅವರ ಕುರುಡು ಕಣ್ಣಿಗೆ ನಮ್ಮ ಶಾಸ್ತ್ರೀಜಿ ಹೋರಾಟ, ಚಳವಳಿ ಯಾವುದೂ ಕಣ್ಣಿಗೆ ಬಿದ್ದಿಲ್ಲ. ಎಲ್ಲೊ ಒಂದು ಮೂಲೆಯಲ್ಲಿ 'ಶಾಸ್ತ್ರಿ ಅವರ ಹುಟ್ಟುಹಬ್ಬ' ಎಂಬ ಎರಡು ಸಾಲು ಮಾತ್ರ ಕಂಡದ್ದು ಬಿಟ್ಟರೆ ಬೇರೇನೂ ಇಲ್ಲ. 'ದ ಸಂಡೆ ಇಂಡಿಯನ್' ತನ್ನ ವಿಶೇಷ ಸಂಚಿಕೆಯಲ್ಲಿ 60 ವರ್ಷದ ಪ್ರಮುಖ ಘಟನಾವಳಿಗಳ ನಡುವೆ 'ವಿದೇಶದಲ್ಲಿ ಸಾವುಂಡ ಏಕೈಕ ಪ್ರಧಾನಿ' ಎಂಬ ಚಿಕ್ಕ ಚೊಕ್ಕ ಲೇಖನ ಪ್ರಕಟಿಸಿತ್ತು. ಇನ್ನು ತರಂಗದಲ್ಲಿ ಶೃಂಗೇರಿ ಶಾರದಾಂಬೆ, ರಂಜಾನ್ ಮತ್ತು ಪುಟ ತುಂಬಿಸೋಕೆ 4 ಪುಟ ಮಸೀದಿಗಳ ಪೋಟೋಗಳು..ಈ ಮಂದೀರ, ಮಸೀದಿ ಬಿಟ್ಟು ತರಂಗ ಎಂದು ಹೊರಬರುವುದೋ?

ಸ್ವಾತಂತ್ರ್ಯ ಚಳುವಳಿಯಲ್ಲಿ ಒಂಬತ್ತು ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿದ ಶಾಸ್ತ್ರೀಜಿ, ನಮ್ಮ ದೇಶ ಕಂಡ ಪ್ರಾಮಾಣಿಕ ಹಾಗೂ ಸರಳ ಜೀವಿ. ದೇಶಾಭಿಮಾನ, ಸ್ವಾಭಿಮಾನ ಇವರ ಹುಟ್ಟು ಬಳುವಳಿ. ಮರಣದ ನಂತರ ಅವರಿಗೆ ಭಾರತ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇವರ ಘೋಷ ವಾಕ್ಯಗಳಾದ 'ಜೈ ಕಿಸಾನ್, ಜೈ ಜವಾನ್ ' ಇಂದಿಗೂ ಭಾರತೀಯರ ಮನದಲ್ಲಿ ಚಿರಾಯುವಾಗಿದೆ. ಆದರೆ ನಮ್ಮ ಶಾಸ್ತ್ರೀಜಿ..?

"ಶಾಸ್ತ್ರಿ ಅವರು ಬದುಕಿ ಪ್ರಧಾನಿಯಾಗಿ ಮುಂದುವರೆಯುತ್ತಿದ್ದರೆ ನಮ್ಮ ರಾಷ್ಟ್ರದ ರಾಜಕೀಯ ಮತ್ತು ಪರಿಣಾಮವಾಗಿ ಸಾಮಾಜಿಕ ಮತ್ತು ವ್ಯಕ್ತಿಗತ ನೈತಿಕ ಮೌಲ್ಯಗಳು ಇಷ್ಟು ಪ್ರಪಾತಕ್ಕೆ ಇಳಿಯುತ್ತಿರಲಿಲ್ಲವೆಂಬುವುದು ನನ್ನ ನಂಬಿಕೆ" ಎನ್ನುತ್ತಾರೆ ಖ್ಯಾತ ಕಾದಂಬರಿಕಾರ ಎಸ್. ಎಲ್.ಭೈರಪ್ಪ.

ಆದರೆ ಇಂದು ಒಂದು ದಿನದ ಮಟ್ಟಿಗೂ ಅವರು ನಮಗೆ ನೆನಪಾಗುವುದಿಲ್ಲ. ಮಾಧ್ಯಮಗಳು ಸಮಾಜದ ಕೈಗನ್ನಡಿ, ಮುಖವಾಣಿ..ಮಾರ್ಗದರ್ಶಿ ಎಂದೆಲ್ಲಾ ಬೊಗಳೆ ಬಿಡುತ್ತೇವೆಲ್ಲಾ ಆದರೆ ಮಾಡುವುದೇನು? ಪತ್ರಿಕೆಗಳ ಕ್ರೀಡಾ ತಾರತಮ್ಯದ ಬಗ್ಗೆ ಮೊದಲೇ ಹೇಳಿದ್ದೆ.


"ಲೋಕದ ಕೊಳೆಯನ್ನು ಗುಡಿಸಿ ರೋಗರುಜಿನಗಳು ತಡೆಗಟ್ಟುವ ಶಕ್ತಿ ಸಾಧನಗಳಲ್ಲಿ ಪತ್ರಿಕೆಯೂ ಒಂದು. ಪತ್ರಿಕಾ ಶಕ್ತಿ ಸ್ವಧರ್ಮ ಬಾಹಿರವಾದಾಗ ಲೋಕಕ್ಕೆ ಕೇಡು ತಪ್ಪದು" ಎನ್ನುತ್ತಾರೆ ದೇ.ಜ.ಗೌ. ಅದೆಷ್ಟು ಸತ್ಯ. ನನಗಿನ್ನೂ ನೆನಪಿದೆ. ಕರ್ನಾಟಕದ ನಂ.1 ಪತ್ರಿಕೆಯ ಸಂಪಾದಕರೊಬ್ಬರು ನಮ್ಮ ಕಾಲೇಜಿಗೆ ಅಂದು ಭೇಟಿ ನೀಡಿದ್ದರು. ಆಗ ನಾವು ಅವರತ್ರ "ಸರ್, ಸಾನಿಯಾ ಮಿರ್ಜಾ ಸೋತ್ರೂ, ಗೆದ್ರೂ ಮುಖಪುಟದಲ್ಲಿಯೇ ಪ್ರಕಟಿಸುತ್ತಿರಲ್ಲಾ?" ಎಂದು ಕೇಳಿದೆವು. ಆ ಮನುಷ್ಯ ನಗುತ್ತಾ ಉತ್ರ ನೀಡಿದ್ದೇನು ಗೊತ್ತೇ? "ನೋಡ್ರೀ ನಮ್ ಪತ್ರಿಕೆ ಸೇಲ್ ಆಗಬೇಕಾದ್ರೆ ನಾವು ಅದನ್ನು ಮಾಡಲೇಬೇಕು. ಸಾನಿಯಾ ನೋಡೋಕೆ ಚೆನ್ನಾಗಿದ್ದಾಳೆ.. ಆದ್ರಿಂದ ಮೊದಲ ಪೇಜ್ ನಲ್ಲಿ ಪೋಟೋ ಹಾಕಿದ್ದೀವಿ... ಜನರು ಅವಳನ್ನು ನೋಡಿಯಾದರೂ ಪತ್ರಿಕೆ ಕೊಂಡುಕೊಳ್ಳುತ್ತಾರೆ"!!

ಸತ್ಯ ಬಿಡಿ. ಆದರೆ ಇದು ಪತ್ರಿಕಾ ಧರ್ಮವೇ? ಪ್ರಸಕ್ತ ಪರಿಸ್ಥಿತಿ ಹೇಗಿದೆ ಎಂದರೆ ನಮ್ಮ ರಾಷ್ಟ್ರೀಯ ದಿನಗಳು, ರಾಜಕಾರಣ ಎಲ್ಲವೂ ಯಾವುದೋ ಒಂದು ಕುಟುಂಬ ರಾಜಕೀಯಕ್ಕೆ ಮಾತ್ರ ಸೀಮಿತವಾಗಿದೆ. ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಶ್ ಚಂದ್ರ ಭೋಸ್, ಸಾವರ್ಕರ್, ಭಗತ್ ಸಿಂಗ್ ಯಾರೇ ಆಗಲಿ.. ಅವರ ನೆನಪು, ಧ್ಯೇಯ-ಆದರ್ಶ ಎಲ್ಲವೂ ಅಷ್ಟಕ್ಕಷ್ಟೇ. ಅದೇ ನೆಹರೂ, ಗಾಂಧೀ..ಕುಟುಂಬದ ಯಾರ ಸತ್ತ ಅಥವಾ ಹುಟ್ಟಿದ ದಿನಗಳಾಗಲೀ ನಮ್ಮ ಪತ್ರಿಕೆಗಳು ಮುಖಪುಟದಲ್ಲಿ ಅಚ್ಚೊತ್ತಿಬಿಡುತ್ತವೆ. ಪತ್ರಿಕೆ ಸಮಾಜವನ್ನು ತಿದ್ದಬೇಕು..ವಿನಹ ಸಮಾಜವನ್ನು ಮತ್ತಷ್ಟು ಹೀನಾಯ ಸ್ಥಿತಿಗೆ ಕೊಂಡೊಯ್ಯಬಾರದು. ಕೊಳೆತು ನಾರುವ ರಾಜಕೀಯ, ಈ ಹಿಂದೆ ಜನರಿಗೆ ವಾಕರಿಕೆ ಬರುವಷ್ಟು ಸಲ ಅದೇ ಬಿಸಿ ಬಿಸಿ ಮಸಾಲ ಮತ್ತು ಬೊಜ್ಜು ಕರಗಿಸೋದು, ದಿನದಲ್ಲಿ ಎಷ್ಟು ಬಾರಿ ಟಾಯ್ಲೆಟ್ಗೆ ಹೋಗಬೇಕು.. ಮುಂತಾದ ಡಾಕ್ಟ್ರು ಕೊಡುವ ಸಲಹೆಗಳನ್ನು ಕೊಡುವುದನ್ನು ಬಿಟ್ಟು ಬಿಟ್ಟು, ಸಮಾಜದಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಯಾವುದು ಪೂರಕವೋ ಅದನ್ನು ನೀಡಬೇಕಾಗಿದೆ... ನೀವೇನಂತಿರಿ..?
ಚರ್ಚೆಗೆ ಸ್ವಾಗತ..

Friday, October 5, 2007

ನಾವು ಎಷ್ಟಂದ್ರೂ ಅಷ್ಟೆ ಬಿಡಿ!



ಈ ಬಾರಿ ಯಾವುದೇ ಮ್ಯಾಗಜೀನ್ ತೆಗೆದು ನೋಡಿ. ಕ್ರಿಕೆಟ್ ಸುದ್ದಿ ಇಲ್ಲದೆ ಇದ್ರೆ ಕೇಳಿ. ಧೋನಿ ಕೈಯಲ್ಲಿ ಲಕ ಲಕ ಮಿಂಚುತ್ತಾ ಇರೋ ಟ್ವೆಂಟಿ-20 ವಿಶ್ವ ಕಪ್. ಒಂದರಲ್ಲಿ 'ಹ್ಯಾಟ್ಸಾಫ್ ಯಂಗ್ ಹಾರ್ಟ್ಸ್' ಅಂತಿದ್ದರೆ, ಇನ್ನೊಂದು ಕಡೆ 'ಶಹಭಾಸ್ ಟೀಮ್ ಇಂಡಿಯಾ' . ಮತ್ತೊಂದರಲ್ಲಿ '24 ವರ್ಷಗಳ ನಂತರ ವಿಜಯೋತ್ಸವ!' 'ಔಟ್ ಲುಕ್' ಅಂತೂ ವಿಶೇಷ ಸಂಚಿಕೆಗಳ ಮಧ್ಯದ ಪೇಜ್ ಇರುವಂತೆ ಒಂದು ಮಿರುಗುವ ದೊಡ್ಡ ಪೇಜ್ ಇಡೀ ಧೋನಿ ಪಡೆಯ ಫೋಟೋ ಹಾಕಿಬಿಟ್ಟಿತ್ತು! ಯಪ್ಪಾ..!

ವಿಶ್ವಕಪ್ ಗೆದ್ದಿರುವುದು ಖಂಡಿತ ಚಿಕ್ಕ ಸಾಧನೆಯಲ್ಲ. ಒಪ್ಪಿಕೊಳ್ಳೋಣ. ಆದರೆ ಒಂದು ಜಯದ ನಂತರ ಉಬ್ಬಿಹೋಗಿ ಮುಂದಿನ ಕರ್ತವ್ಯ ಮರೆಯುವುದರಲ್ಲಿ ನಾವು ನಿಸ್ಸೀಮರು. ಹೆಚ್ಚ್ಯಾಕೆ? ಟ್ವೆಂಟಿ-20ಯಲ್ಲಿ ಆಸ್ಟ್ರೇಲಿಯಾ ಸದೆ ಬಡಿದ ಇದೇ 'ಟೀಮ್ ಇಂಡಿಯಾ' ಈಗ ಆಸ್ಟ್ರೇಲಿಯಾ ಕೈಯಿಂದಲೇ ಹೊಡೆಸಿಕೊಳ್ಳುತ್ತಿದೆ. ಈ ಮೀಡಿಯಾಗಳೇ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ಕೊಟ್ಟುಬಿಡುತ್ತವೆ ಅನ್ನೋದು ಖಂಡಿತ ಸುಳ್ಳಲ್ಲ. ಆದರೆ ಹಾಕಿಯಲ್ಲಿ ಭಾರತ ತಂಡ ಕೊರಿಯಾವನ್ನು 7-2 ರಿಂದ ಸದೆ ಬಡಿದಾಗ, ಫುಟ್ಬಾಲ್ನಲ್ಲಿ ನೆಹರೂ ಕಪ್ ಜಯಿಸಿ ಬಂದಾಗ ಇದೇ ಪ್ರಚಾರ ಯಾಕೆ ಸಿಕ್ಕಿಲ್ಲ?

ಇನ್ನು ನ್ಯೂಸ್ ಚಾನೆಲ್ ಕಥೆ ಕೇಳಲೇ ಬೇಡಿ. ಭಾರತಕ್ಕೆ ಮರಳಿದ ಕ್ರಿಕೆಟ್ ತಂಡಗಳ ಮೆರವಣಿಗೆಯನ್ನು ದಿನವಿಡೀ ಪ್ರಸಾರ ಮಾಡಿದ್ದವು. ಅವೇ ಚಾನೆಲ್ ಗಳು ಐಶ್-ಅಭಿ ಮದುವೆ ಸಂದರ್ಭವೂ ಹೀಗೆ ಮಾಡಿದ್ದವು. ನಾವು ಎಷ್ಟೇ ಬಡ್ಕೊಂಡ್ರೂ ಏನೂ ಆಗಲ್ಲ ಬಿಡಿ. ಯಾಕೆಂದ್ರೆ ಎಷ್ಟೇ ಹೇಳಿದ್ರೂ ನಮಗೂ ಇಂತಹ ಸುದ್ದಿಗಳೇ ಬೇಕಾಗಿರುವುದು. ಐಶ್ ಮದುವೆಗೆ ಕೆಂಪು ಸೀರೆ ಉಟ್ಟಿದ್ದೋ, ಹಸಿರೋ ಎನ್ನುವುದು ಕಾಶ್ಮೀರದಲ್ಲಿ ಮಡಿಯುತ್ತಿರುವ ಯೋಧರಿಗಿಂತ ಹೆಚ್ಚು ಮುಖ್ಯ ನಮಗೆ. ಅಯ್ಯೋ, ಈ ರಗಳೆ ಎಲ್ಲಾ ಯಾಕೆ, ಬಿಟ್ ಹಾಕಿ ಅಂದು ಸುಮ್ಮನಾದ್ರಾ?