Thursday, November 29, 2007

ನಂದಿಗ್ರಾಮ ನರಹತ್ಯೆ ಮುಖಪುಟ ಸುದ್ದಿ ಅಲ್ಲವೇ?

ತುಂಬಾ ದಿನಗಳಾಯ್ತು ಬ್ಲಾಗ್ ಕಡೆ ಕಣ್ಣಾಯಿಸದೆ. ಬರೀಬೇಕು ಬರೀಬೇಕು ಅಂದುಕೊಂಡು ದಿನಗಳೇ ಸರಿದುಹೋದರೂ ಬರೆಯಕ್ಕಾಗಿಲ್ಲ. ಏನೋ ಈ ಕೆಲಸದ ಒತ್ತಡ, ಒಂಚೂರು ಅನಾರೋಗ್ಯ, ಒಂದು ವಾರ ಬೆಡ್ ರೆಸ್ಟ್ ಹಿಂಗೆ ಏನೇನೋ ಕಾರಣಗಳು. ಪತ್ರಿಕೆ, ನಿಯತಕಾಲಿಕೆಗಳ ಕಡೆ ಸರಿಯಾಗಿ ಕಣ್ಣಾಯಿಸದೆ ತಿಂಗಳೇ ಸರಿದುಹೋಯ್ತು ಅನಿಸುತ್ತೆ.

ಮೊನ್ನೆ ಮೊನ್ನೆ ನಂದಿಗ್ರಾಮ ರಕ್ತಪಾತ ನಡೆಯಿತಲ್ಲ. ಆವಾಗ ಒಂದಿಷ್ಟು ಪತ್ರಿಕೆಗಳನ್ನು ಗಮನಿಸಿದೆ. ಆಗ ಕರ್ನಾಟಕದಲ್ಲಿ ರಾಜಕೀಯ ಮೇಳ ನಡೆಯುತ್ತಿತ್ತು. ನಂದಿಗ್ರಾಮದಲ್ಲಿ ಬಡಜನರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡ್ತಾ ಇದ್ರು. ಇನ್ನೊಂದೆಡೆ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಓಂ ಶಾಂತಿ ಓಂ' ಬಿಡುಗಡೆಗೆ ಎಲ್ಲಡೆ ಸಿದ್ಧತೆ ನಡೆಯುತ್ತಿತ್ತು. ನಂದಿಗ್ರಾಮದಲ್ಲಿ ಜನರು ಸಾಯುತ್ತಿದ್ದರೂ, ನಮ್ಮ ಪತ್ರಿಕೆಗಳಿಗೆ ರಾಜಕೀಯ, 'ಓಂ ಶಾಂತಿ ಓಂ' ಬಿಟ್ಟರೆ ನಂದಿಗ್ರಾಮದ ಸುದ್ದಿ ಮಹತ್ವದ್ದು ಅನಿಸಿಲ್ಲ. ಅದೇ ಅಮೇರಿಕದ ಅಧ್ಯಕ್ಷ ಜಾರ್ಜ್ ಡಬ್ಯೂ ಬುಷ್ ಶ್ವೇತಭವನದಲ್ಲಿ ಮೈಕ್ ಎದುರು ಮಾತಾಡಿದ್ರೆ ನಮ್ಮವರಿಗೆ ಮುಖಪುಟದ ಸುದ್ದಿ ಆಗುತ್ತಿತ್ತು. ಬಚ್ಚನ್ ಕುಟುಂಬ ದೇವಸ್ಥಾನಕ್ಕೆ ಹೋದ್ರೆ ಅದು ದೊಡ್ಡ ಸುದ್ದಿ. ಬೇಕಾದ್ರೆ ಊಟ ತಿಂಡಿ ತಿನ್ನದೆ ಅವರನ್ನು ಮಾತಾಡಿಸಲು ನಮ್ಮ ಪತ್ರಕರ್ತರು ಕಾದುಕುಳಿತಿರುತ್ತಾರೆ. ಮೊನ್ನೆ ಅಭಿಷೇಕ್-ಐಶ್ವರ್ಯ ಮಂಗಳೂರಿಗೆ ಬಂದ್ರಲ್ಲಾ? ಐಶ್ವರ್ಯ ತಂದೆಯ ಹುಟ್ಟುಹಬ್ಬಕ್ಕೆ ಆ ಪೋಟೋಗಳು ಎಲ್ಲಾ ಪತ್ರಿಕೆಗಳಲ್ಲೂ ಬಂದಿವೆ. ಅದೇ 'ಟೈಮ್ಸ್ ಆಫ್ ಇಂಡಿಯಾ ' ಕನ್ನಡದಲ್ಲಿ ಸರಿಸುಮಾರು ಕಾಲು ಪೇಜ್ ಗಿಂತಲೂ ಹೆಚ್ಚು ಈ ಬಗ್ಗೆ ಬರೆದಿದ್ದರು. ಬರೆದಿದ್ದೇನು ಗೊತ್ತಾ? 'ಅಭಿಷೇಕ್-ಐಶ್ ಬಂದ್ರು..........ಎಷ್ಟೆ ಕಾದ್ರೂ ಪತ್ರಕರ್ತರಿಗೆ ಮಾತಾಡಲು ಸಿಗದೆ ಕಾರು ಹತ್ತಿ ಹೋದರು..." ಅಂತೂ-ಇಂತೂ ಕಾದ್ರೂ ಸಿಕ್ಕಿಲ್ಲ. ಅಂತೆ-ಕಂತೆಗಳ ಸುದ್ದಿಯನ್ನು ಅಷ್ಟುದ್ಧ ಹೇಳಬೇಕಿತ್ತೆ? ಇಲ್ಲ. ಮತ್ಯಾಕೆ ಹೇಳಿದ್ದು? ಅವ್ರ ಪೋಟೋ ನೋಡಿಯಾದ್ರೂ ಜನ ಓದಲಿ ಎಂದೇ? .

ಇದೇ ಸಂದರ್ಭದಲ್ಲಿ 'ದ ಸಂಡೆ ಇಂಡಿಯನ್' ಮ್ಯಾಗಜಿನ್ ತೆಗೆದು ಓದಿದೆ. ಇಂಗ್ಲೀಷ್ 'ದ ಸಂಡೆ ಇಂಡಿಯನ್' ನೋಡಿದ್ರೆ ಮುಖಪುಟದಲ್ಲಿಯೇ ಶಾರುಖ್ ಖಾನ್ ಮತ್ತು ದೀಪಿಕಾ ಮುಂಚುತ್ತಿದ್ದಾರೆ. ನಂದಿಗ್ರಾಮದ ಸುದ್ದಿ ಒಳಪುಟದಲ್ಲಿದೆ. ಸರಿ..ಅದನ್ನೇ ಮುಖಪುಟ ಸುದ್ದಿಯಾಗಿ ಮಾಡಬಹುದಿತ್ತಲ್ಲಾ? ಅದೇ ಕನ್ನಡ 'ದ ಸಂಡೆ ಇಂಡಿಯನ್' ನಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಕುರಿತಾದಿ ಮುಖಪುಟ ಲೇಖನ. ಅದಾದ್ರೂ ಪ್ರಸ್ತುತ. ಯಾಕೆಂದ್ರೆ ಅದೇ ಸಂದರ್ಭದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು. ಆದರೆ ಅದ್ಯಾಕೆ ಆ ಸಿನಿಮಾ ತಾರೆಯರ ಸುದ್ದಿಯೇ ಮುಖಪುಟ ಸುದ್ದಿಯಾಗುತ್ತೋ ದೇವರೇ ಬಲ್ಲ. ಒಟ್ಟಾಗಿ ಹೇಳುವುದಾದರೆ ಮುಖಪುಟದಲ್ಲಿ ಚಂದದ ಪೋಟೋ ಹಾಕಿ ಮಾರಾಟ ಹೆಚ್ಚಿಸುವ ಬ್ಯುಸಿನೆಸ್ ಮಾಡ್ತಾ ಇದ್ದಾವೆ ಈ ಪತ್ರಿಕೆಗಳು. ಪತ್ರಿಕೆಗಳು ಸಮಾಜದ ಮುಖವಾಣಿ ಅನ್ತಾರಲ್ಲಾ? ಈ ಬಗ್ಗೆಯೇ ಸಂಶಯ ಮೂಡುತ್ತೆ.

ಹಾಂ! ಒಂದು ವಿಷಯ ನೆನಪಾಯಿತು. ಕನ್ನಡ ಪ್ರಭ ವರ್ಷದ ವ್ಯಕ್ತಿ ಪ್ರಶಸ್ತಿ ನೀಡುತ್ತಲ್ಲಾ? ಈ ಬಗ್ಗೆ ನಿಮಗೆ ತಿಳಿದಿರಬಹುದು. ಪ್ರಶಸ್ತಿ ಪಡೆಯಬೇಕಾದ ಅರ್ಹತೆ ಏನಿರಬೇಕು ಎಂದು ತಿಳಿಸಿದ್ದಾರೆ. ಅದನ್ನು ಪ್ರತಿಯೊಬ್ಬರು ಓದಬೇಕು. ನಿಜವಾದ ಪತ್ರಿಕಾ ಧರ್ಮ ಅದು. ಹಾಗಂತ ಕನ್ನಡ ಪ್ರಭವನ್ನು ಹೊಗಳುತ್ತಿಲ್ಲ. ಪ್ರಶಸ್ತಿ ನೀಡಬೇಕಾದರೆ ಎಂಥವರಿಗೆ ಪ್ರಶಸ್ತಿ ನೀಡಬೇಕೆಂದು ತಿಳೀಸಿದ್ದರಲ್ಲಾ ಅದು ನಂಗೆ ತುಂಬಾ ಇಷ್ಟವಾಯಿತು.

ಓಹ್! ಇನ್ನೇನೇನೋ ಹೇಳಬೇಕಿತ್ತು. ಆದ್ರೆ ಈಗ ಸಮಯವಿಲ್ಲ. ಅದೇ ಹಳೇ ರಾಗ....ಮತ್ತೆ ಭೇಟಿಯಾಗೋಣ

No comments: